ಬೆಂಗಳೂರು: ಪ್ರತಿವರ್ಷದಂತೆ ಈ ಸಲವೂ ರಾಜ್ಯೋತ್ಸವ ಪ್ರಶಸ್ತಿಯ ಪಟ್ಟಿ ಪ್ರಕಟವಾಗಿದ್ದು, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಗಾಣಿಗ ಸಮಾಜದ ನಾಲ್ವರು ಆಯ್ಕೆ ಆಗಿದ್ದಾರೆ. ಯಕ್ಷಗಾನ ಕಲಾವಿದ ಉಪ್ಪುಂದ ಶ್ರೀಧರ ಗಾಣಿಗ, ರಾಷ್ಟ್ರಮಟ್ಟದ ಕ್ರೀಡಾಪಟು ಜಿ. ಜಯಲಕ್ಷ್ಮಿ, ಸಮಾಜಸೇವಕ ಅಶೋಕ್ ಸೋಮೇಶ್ವರ ಹಾಗೂ ನಾಗಸ್ವರ ವಾದಕ ಶಿವರಾಮ ಶೇರಿಗಾರ್ ಅರಳ ಅವರು ೨೦೨೧ನೇ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿರುತ್ತಾರೆ.
ಯಕ್ಷಗಾನ ಕಲಾವಿದ ಉಪ್ಪುಂದ ಶ್ರೀಧರ ಗಾಣಿಗ
ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಯಕ್ಷಗಾನ ಕಲಾವಿದ ಉಪ್ಪುಂದ ಶ್ರೀಧರ ಗಾಣಿಗ ಅವರು ಆಯ್ಕೆ ಆಗಿದ್ದಾರೆ. ಪ್ರಸ್ತುತ ಶ್ರೀಕ್ಷೇತ್ರ ಮಾರಣಕಟ್ಟೆ ಮೇಳದಲ್ಲಿ ಪ್ರಧಾನ ಸ್ತ್ರೀವೇಷಧಾರಿಯಾಗಿ ಇವರು ತೊಡಗಿಸಿಕೊಂಡಿದ್ದಾರೆ.
ಮೂರೂವರೆ ದಶಕಗಳಿಂದ ಯಕ್ಷರಂಗದಲ್ಲಿ ಇರುವ ಇವರು ಈ ಹಿಂದೆ ಸೌಕೂರು, ಮಂದರ್ತಿ, ಕಮಲಶಿಲೆ, ಕೋಟ ಮೇಳಗಳಲ್ಲಿ ಇವರು ಸ್ತ್ರೀವೇಷಧಾರಿಯಾಗಿ ಲಕ್ಷಾಂತರ ಯಕ್ಷಗಾನಪ್ರಿಯರನ್ನು ರಂಜಿಸಿದ್ದಾರೆ. ಅದರಲ್ಲೂ ಶ್ರೀದೇವಿ ಮಹಾತ್ಮೆ ಪ್ರಸಂಗದಲ್ಲಿನ ಇವರ ದೇವಿಯ ಪಾತ್ರ ಬಹಳ ಜನಪ್ರಿಯವಾಗಿದೆ.
ಆರಂಭದಲ್ಲಿ ಒಂದಷ್ಟು ಕಾಲ ಟೈಲರ್ ಆಗಿ ಕೆಲಸ ಮಾಡುತ್ತಿದ್ದ ಇವರು ʼಯಕ್ಷವಾಹಿನಿʼ ಎಂಬ ಸಂಘ ಕಟ್ಟಿಕೊಂಡು ಯಕ್ಷಗಾನ ಚಟುವಟಿಕೆಯಲ್ಲೂ ತೊಡಗಿಸಿಕೊಂಡಿದ್ದರು. ಕೋವಿಡ್-19 ಸಂಕಷ್ಟದ ಸಮಯದಲ್ಲಿ ಯಕ್ಷಗಾನ ಪ್ರದರ್ಶನ ಸ್ಥಗಿತಗೊಂಡು ಬದುಕು ದುಸ್ತರವಾದಾಗ ಮತ್ತೆ ಅದೇ ಟೈಲರಿಂಗ್ ಮೂಲಕ ಜೀವನೋಪಾಯ ಕಂಡುಕೊಂಡಿದ್ದಲ್ಲದೆ, ಕೊರೊನಾ ವಾರಿಯರ್ಸ್ಗೆ ಅಗತ್ಯವಿರುವ ಮುಖಗವಸು ಹಾಗೂ ಶೂ ಕವರ್ ಹೊಲಿದು ಕೊಡುವ ಮೂಲಕ ಕೊರೊನಾ ವಿರುದ್ಧದ ಹೋರಾಟದಲ್ಲೂ ಭಾಗಿಯಾಗಿದ್ದರು.
ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಪಟು ಜಿ. ಜಯಲಕ್ಷ್ಮಿ
ರಾಷ್ಟ್ರಮಟ್ಟದ ಬಾಲ್ ಬ್ಯಾಡ್ಮಿಂಟನ್ ಕ್ರೀಡಾಪಟುವಾಗಿರುವ ಜಿ. ಜಯಲಕ್ಷ್ಮಿ ಅವರು ೨೦೨೧ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ.
ಕಳೆದ ನವೆಂಬರ್ನಲ್ಲಿ ಜಯಲಕ್ಷ್ಮಿ ಅವರು ಕರ್ನಾಟಕ ಸರ್ಕಾರ ನೀಡಿದ ೨೦೧೭ನೇ ಸಾಲಿನ ಕ್ರೀಡಾರತ್ನ ಪ್ರಶಸ್ತಿಗೆ ಪಾತ್ರರಾಗಿದ್ದು, ಅಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಂದ ನ. 2ರಂದು ಪ್ರಶಸ್ತಿ ಸ್ವೀಕರಿಸಿದ್ದರು.
ಅಲ್ಲದೆ ಕಳೆದ ಬಾರಿ ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ರ್ಯಾಂ ಕ್ ಪಡೆದಿರುವ ಇವರು ನಾಲ್ಕು ಬಾರಿ ಸ್ಟಾರ್ ಆಫ್ ಇಂಡಿಯಾ ಪ್ರಶಸ್ತಿ ವಿಜೇತೆ ಕೂಡ ಆಗಿದ್ದಾರೆ. ಇವರ ಕುರಿತು ಗ್ಲೋಬಲ್ ಗಾಣಿಗ.ಕಾಮ್ ಕಳೆದ ವರ್ಷವೇ ವಿಸ್ತೃತ ವರದಿ ಪ್ರಕಟಿಸಿದೆ. ಇವರ ಸಾಧನೆ ಕುರಿತ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.
ಸಂಬಂಧಿತ ಸುದ್ದಿ: ಬಾಲ್ ಬ್ಯಾಡ್ಮಿಂಟನ್ ಪ್ರತಿಭೆ ಜಯಲಕ್ಷ್ಮಿಗೆ ಕ್ರೀಡಾರತ್ನ ಪ್ರಶಸ್ತಿ ಪ್ರದಾನ
ಜೀವರಕ್ಷಕ ಅಶೋಕ್ ಸೋಮೇಶ್ವರ
ಅಶೋಕ್ ಸೋಮೇಶ್ವರ ಅವರು ಸೋಮೇಶ್ವರ ಕಡಲ ತೀರದಲ್ಲಿ ಕರಾವಳಿ ಕಾವಲು ಪಡೆಯ ಜೀವರಕ್ಷಕ (ತಾತ್ಕಾಲಿಕ) ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ೨೦೨೧ನೇ ಸಾಲಿನ ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಸೋಮೇಶ್ವರ ಅವರು ಸಮುದ್ರ ಪಾಲಾಗುತ್ತಿದ್ದ ಅನೇಕ ಪ್ರವಾಸಿಗರ ಜೀವವನ್ನು ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ್ದಾರೆ.
ನಾಗಸ್ವರ ವಾದ ಶಿವರಾಮ ಶೇರಿಗಾರ್
ನಾಗಸ್ವರ ವಾದಕರಾಗಿರುವ ಶಿವರಾಮ ಶೇರಿಗಾರ್ ಅವರು ೨೦೨೧ನೇ ಸಾಲಿನ ದಕ್ಷಿಣಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಆಗಿದ್ದಾರೆ. ಇವರು ಶಿಬರೂರು ದೇವಸ್ಥಾನದಲ್ಲಿ ನಾಗಸ್ವರ ವಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಸಂಬಂಧಿತ ಸುದ್ದಿ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಲಿಂಗಪ್ಪ ಕಟೀಲರಿಗೆ ಡಿ. 6ರಂದು ಅಭಿನಂದನಾ ಸಮಾರಂಭ
ಸಂಬಂಧಿತ ಸುದ್ದಿ: ರಾಷ್ಟ್ರಮಟ್ಟದ ಪವರ್ ಲಿಫ್ಟಿಂಗ್ ಚಾಂಪಿಯನ್ಷಿಪ್ನಲ್ಲಿ ವಿಶ್ವನಾಥ್ಗೆ ಮತ್ತೆ 3 ಚಿನ್ನದ ಪದಕ
ಸಂಬಂಧಿತ ಸುದ್ದಿ: ಪ್ರಜ್ಞಾ ಪ್ರಕಾಶ್ಗೆ ಮುಖ್ಯಮಂತ್ರಿ ಚಿನ್ನದ ಪದಕ ಪ್ರದಾನ