ಬೆಂಗಳೂರು: ಸೋಮಕ್ಷತ್ರಿಯ ಗಾಣಿಗ ಸಮಾಜ ಬೆಂಗಳೂರು (ರಿ.) ಇದರ ನೂತನ ಗೌರವಾಧ್ಯಕ್ಷ ಹಾಗೂ ಅಧ್ಯಕ್ಷ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಹೋಟೆಲ್ ಉದ್ಯಮಿಗಳಾಗಿರುವ ಬಿ.ಎಸ್. ಮಂಜುನಾಥ ಹಾಗೂ ಎಚ್.ಟಿ. ನರಸಿಂಹ ಅವರು ಮತ್ತೆ ಗೌರವಾಧ್ಯಕ್ಷ ಹಾಗೂ ಅಧ್ಯಕ್ಷರಾಗಿ ಮುಂದುವರಿದಿದ್ದಾರೆ.
ಈ ಹಿಂದಿನ ಅವಧಿಯಲ್ಲಿ ಇಬ್ಬರೂ ಸಮಾಜದ ನೊಗ ಹಿಡಿದು ಉತ್ತಮವಾಗಿ ಜವಾಬ್ದಾರಿ ನಿಭಾಯಿಸಿದ್ದರಿಂದ ಇವರ ಸ್ಥಾನಕ್ಕೆ ಸ್ಪರ್ಧಿಯಾಗಿ ಬೇರೆ ಯಾರೂ ನಾಮಪತ್ರ ಸಲ್ಲಿಸದ ಹಿನ್ನೆಲೆಯಲ್ಲಿ ಇವರಿಬ್ಬರೂ ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಮತ್ತೆ ಅದೇ ಸ್ಥಾನಗಳಲ್ಲಿ ಮುಂದುವರಿದಿದ್ದಾರೆ.
ಬೆಂಗಳೂರಿನ ಚಾಮರಾಜಪೇಟೆಯ ವ್ಯಾಸರಾಜ ಭವನದಲ್ಲಿ ಡಿ. 5ರಂದು ನಡೆದ ಸೋಮಕ್ಷತ್ರಿಯ ಗಾಣಿಗ ಸಮಾಜದ 2020-21ನೇ ಸಾಲಿನ ವಾರ್ಷಿಕ ಸಭೆಯಲ್ಲಿ ಈ ಆಯ್ಕೆ ನಡೆದಿದೆ. ನೂತನ ಪದಾಧಿಕಾರಿಗಳು ಮುಂದಿನ ಎರಡು ವರ್ಷಗಳ ಕಾಲ ಅಂದರೆ 2021-23ನೇ ಸಾಲಿನ ವರೆಗೆ ಅಧಿಕಾರದಲ್ಲಿರುತ್ತಾರೆ. ಉಪಾಧ್ಯಕ್ಷ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿ ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆದಿದ್ದು, ಉಳಿದ ಎಲ್ಲ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆಯಿತು.
ಸಂಘದಲ್ಲಿನ ಎರಡು ಉಪಾಧ್ಯಕ್ಷ ಸ್ಥಾನಗಳಿಗೆ ಎಂ. ಗೋಪಾಲಕೃಷ್ಣ, ಕೆ.ಎಂ. ಲಕ್ಷ್ಮಣ ಹಾಗೂ ಸಂತೋಷ್ ಕೋಡಿ ಅವರು ಉಮೇದುವಾರಿಕೆ ತೋರಿಸಿದ್ದರಿಂದ ಮೂವರು ಸ್ಪರ್ಧಿಗಳಿದ್ದರು. ಹಾಗೆಯೇ ಸಾಂಸ್ಕೃತಿಕ ಕಾರ್ಯದರ್ಶಿ ಸ್ಥಾನಕ್ಕೆ ಪ್ರಕಾಶ್ಚಂದ್ರ ಕುತ್ಪಾಡಿ ಮತ್ತು ಕೆ.ಎಂ.ಶೇಖರ್ ಉಮೇದುವಾರಿಕೆ ತೋರಿಸಿದ್ದರು. ಎರಡು ಉಪಾಧ್ಯಕ್ಷ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಕೆ.ಎಂ.ಲಕ್ಷ್ಮಣ ಅವರು ಪುನರಾಯ್ಕೆಗೊಂಡರು. ಹೊಸದಾಗಿ ಉಮೇದುವಾರಿಕೆ ತೋರಿಸಿದ್ದ ಸಂತೋಷ್ ಕೋಡಿ ಅವರು ಹೆಚ್ಚಿನ ಮತ ಗಳಿಸಿದ್ದರಿಂದ ಈ ಹಿಂದೆ ಉಪಾಧ್ಯಕ್ಷರಾಗಿದ್ದ ಗೋಪಾಲಕೃಷ್ಣ ಅವರು ಸೋಲು ಕಂಡರು.
ಸಾಂಸ್ಕೃತಿಕ ಕಾರ್ಯದರ್ಶಿ ಸ್ಥಾನಕ್ಕೆ ಕೆ.ಎಂ. ಶೇಖರ್ ಆಯ್ಕೆಗೊಂಡರು. ಉಳಿದಂತೆ ಹಳೆಯ ಪದಾಧಿಕಾರಿಗಳೇ ಅವಿರೋಧವಾಗಿ ಆಯ್ಕೆಗೊಂಡು ಮುಂದುವರಿದಿದ್ದಾರೆ. ವಿಸ್ತೃತ ಪಟ್ಟಿಯನ್ನು ಸದ್ಯದಲ್ಲೇ ಪ್ರಕಟಿಸಲಾಗುವುದು. ಎಲ್ಲ ನೂತನ ಪದಾಧಿಕಾರಿಗಳಿಗೆ ಗ್ಲೋಬಲ್ ಗಾಣಿಗ ಈ ಮೂಲಕ ಅಭಿನಂದನೆಗಳನ್ನು ಸಲ್ಲಿಸಿ, ಶುಭ ಹಾರೈಸಿದೆ.
ನೂತನ ಪದಾಧಿಕಾರಿಗಳು
- ಗೌರವಾಧ್ಯಕ್ಷ: ಬಿ.ಎಸ್. ಮಂಜುನಾಥ
- ಅಧ್ಯಕ್ಷ: ಎಚ್.ಟಿ. ನರಸಿಂಹ
- ಉಪಾಧ್ಯಕ್ಷ: ಕೆ.ಎಂ. ಲಕ್ಷ್ಮಣ, ಸಂತೋಷ್ ಕೋಡಿ
- ಕಾರ್ಯದರ್ಶಿ: ಎಚ್. ಜಗದೀಶ್
- ಜಂಟಿ ಕಾರ್ಯದರ್ಶಿ: ಶಿಲ್ಪಾ ನಾಗೇಶ್
- ಖಜಾಂಚಿ: ಕುತ್ಪಾಡಿ ಎಂ. ಶೇಖರ್
- ಜಂಟಿ ಖಜಾಂಚಿ: ಸುಧಾ ಜಗದೀಶ್
- ಸಾಂಸ್ಕೃತಿಕ ಕಾರ್ಯದರ್ಶಿ: ಕೆ.ಎಂ. ಶೇಖರ್
- ಕ್ರೀಡಾ ಕಾರ್ಯದರ್ಶಿ: ಪಿ.ಜಿ. ರಾಘವೇಂದ್ರ
- ಸಂಘಟನಾ ಕಾರ್ಯದರ್ಶಿ: ರಾಜ ಪಡುಕೋಣೆ
ಸಂಬಂಧಿತ ಸುದ್ದಿ: ಟಿಎಸ್ಆರ್ಟಿಸಿಗೆ ಅವಮಾನ ಮಾಡಿದ ಬೈಕ್ ಟ್ಯಾಕ್ಸಿ ಸಂಸ್ಥೆ ರ್ಯಾಪಿಡೋಗೆ ಬಿಸಿ ಮುಟ್ಟಿಸಿದ ಸಜ್ಜನರ್
ಸಂಬಂಧಿತ ಸುದ್ದಿ: ಪುರಾಣಪ್ರಸಿದ್ಧ ಗೋಕರ್ಣದಲ್ಲಿ ಗಾಣಿಗರಿಂದ ನಡೆಯಿತು ಕಾರ್ತಿಕ ಮಾಸದ ಪ್ರಥಮ ಪೂಜೆ
ಸಂಬಂಧಿತ ಸುದ್ದಿ: ಬಾರ್ಕೂರು ದೇವಳದಲ್ಲಿ ಸಂಭ್ರಮದ ದೀಪೋತ್ಸವ, ಹಾರಾಡಿ ರಾಮ ಗಾಣಿಗ ಪ್ರಶಸ್ತಿ ಪ್ರದಾನ, ಸಾಧಕರಿಗೆ ಸನ್ಮಾನ..