ಬೆಂಗಳೂರು: ನಗರದಲ್ಲಿನ ಸಂಚಾರ ಹಾಗೂ ನಿಲುಗಡೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಸಾರ್ವಜನಿಕರ ಅಹವಾಲು ಆಲಿಸಲು ಬೆಂಗಳೂರು ನಗರ ಸಂಚಾರ ಪೊಲೀಸರು ಡಿ.11ರಂದು ಸಂಚಾರ ಸಂಪರ್ಕ ದಿವಸ ಆಚರಿಸಿದ್ದರು.
ನಗರದ ವಿ.ವಿ.ಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಸಂಚಾರ ಪಶ್ಚಿಮ ವಿಭಾಗದ ಉಪ ಪೊಲೀಸ್ ಆಯಕ್ತ ಕುಲದೀಪ್ ಕುಮಾರ್ ಜೈನ್ ಅವರ ನೇತೃತ್ವದಲ್ಲಿ ಈ ಸಂಚಾರ ಸಂಪರ್ಕ ದಿವಸ ನಡೆಯಿತು. ಸಾರ್ವಜನಿಕರು ಸುಗಮ ಸಂಚಾರ ವ್ಯವಸ್ಥೆ ಕಾಯ್ದುಕೊಳ್ಳಲು ಹೇಗೆ ಸ್ಪಂದಿಸಬೇಕು ಎಂಬ ಬಗ್ಗೆ ಡಿಸಿಪಿ ಜೈನ್ ಅವರು ಮಾಹಿತಿ ನೀಡಿದರು. ಇದೇ ವೇಳೆ ಸಾರ್ವಜನಿಕರು ಕೂಡ ತಮ್ಮ ಅಹವಾಲುಗಳನ್ನು ತಿಳಿಸಿದರು.
ಚಾಮರಾಜಪೇಟೆ ನಿವಾಸಿಗರ ಪರವಾಗಿ ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಅಧ್ಯಕ್ಷ ಬಿ.ಎಸ್. ಸುಬ್ಬಣ್ಣ ಅವರು ಕೆಲವು ವಿಚಾರಗಳನ್ನು ಡಿಸಿಪಿ ಕುಲದೀಪ್ ಕುಮಾರ್ ಜೈನ್ ಅವರ ಗಮನಕ್ಕೆ ತಂದು, ಸೂಕ್ತಕ್ರಮ ಜರುಗಿಸುವಂತೆ ಕೋರಿದರು.
ಚಾಮರಾಜಪೇಟೆಯ ಮೂರು ಮತ್ತು ನಾಲ್ಕನೇ ಮುಖ್ಯರಸ್ತೆಯಲ್ಲಿ ಮಕ್ಕಳಕೂಟದಿಂದ ಎರಡನೇ ಅಡ್ಡರಸ್ತೆಯವರೆಗೆ ವಾಹನ ನಿಲುಗಡೆ ಮತ್ತು ಸಂಚಾರ ಅವ್ಯವಸ್ಥೆ ಕುರಿತು ಸುಬ್ಬಣ್ಣ ಅವರು ಡಿಸಿಪಿಯವರ ಗಮನ ಸೆಳೆದರು. ಆ ಬಗ್ಗೆ ಕ್ರಮಕೈಗೊಳ್ಳುವುದಾಗಿ ಡಿಸಿಪಿ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಅಸೋಸಿಯೇಷನ್ನ ಗೌರವಾಧ್ಯಕ್ಷ ಡಾ.ಎ.ಪ್ರಕಾಶ್ ಮತ್ತಿತರರು ಜೊತೆಗಿದ್ದರು.
ರಾಮೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಸ್ಥಾಪನೆ
ಚಾಮರಾಜಪೇಟೆಯಲ್ಲಿರುವ ಪುರಾತನ ಶ್ರೀರಾಮೇಶ್ವರ ದೇವಸ್ಥಾನದ ಅಭಿವೃದ್ಧಿಗಾಗಿ ಶ್ರೀರಾಮೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಸ್ಥಾಪನೆಗೊಂಡಿದ್ದು, ಅದಕ್ಕೆ ಶ್ರೀರಾಮೇಶ್ವರ ದೇವಸ್ಥಾನದಲ್ಲಿ ಚಾಲನೆ ನೀಡಿದ ಸಂದರ್ಭದಲ್ಲಿ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಬಿ.ಎಸ್. ಸುಬ್ಬಣ್ಣ ಮಾತನಾಡಿದರು.
ಚಾಮರಾಜಪೇಟೆ ಬಡಾವಣೆ ರಚನೆಯಾಗಿ 125 ವರ್ಷಗಳ ಬಳಿಕ ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘ ಸ್ಥಾಪನೆಯಾಗಿದೆ. ಇದೇ ಸಂದರ್ಭದಲ್ಲಿ ಶ್ರೀರಾಮೇಶ್ವರ ದೇವಸ್ಥಾನ ಅಭಿವೃದ್ಧಿ ಸಮಿತಿ ಕೂಡ ರಚನೆಯಾಗಿರುವುದು ಒಂದು ಶುಭಶಕುನ. ಮುಂದೆ ಎಲ್ಲವೂ ಇನ್ನೂ ಒಳ್ಳೆಯದಾಗಲಿದೆ ಎಂದು ಅನಿಸುತ್ತಿದೆ ಎಂಬುದಾಗಿ ಸುಬ್ಬಣ್ಣ ಹೇಳಿದರು.
ಶ್ರೀರಾಮೇಶ್ವರ ದೇವಸ್ಥಾನದ ಮುಂದಿನ ರಥೋತ್ಸವ ಅದ್ಧೂರಿಯಾಗಿ ನಡೆಯಲಿ, ಅದಕ್ಕೆ ನಮ್ಮ ಸಂಘದ ಸಹಕಾರ-ಸಹಾಯವಿರುತ್ತದೆ ಎಂಬ ಭರವಸೆ ನೀಡಿದ ಸುಬ್ಭಣ್ಣ, ಇನ್ನುಮುಂದೆ ಚಾಮರಾಜಪೇಟೆ ಬಡಾವಣೆಯ ಹಿತಕ್ಕೆ ಸಂಬಂಧಿಸಿದ ಎಲ್ಲ ವಿಚಾರಗಳಲ್ಲಿ ಜೊತೆಯಾಗಿರೋಣ, ಪರಸ್ಪರ ಕೈಜೋಡಿಸೋಣ ಎಂದು ಆಶಿಸಿದರು.
ಚಾಮರಾಜಪೇಟೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದ ಪ್ರಪ್ರಥಮ ಅಧ್ಯಕ್ಷರಾಗಿ ಬಿ.ಎಸ್. ಸುಬ್ಬಣ್ಣ
ಚಾಮರಾಜಪೇಟೆ ಬಡಾವಣೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಸದಸ್ಯರೂ ಆಗಿರುವ ಬಿ.ಎಸ್.ಸುಬ್ಬಣ್ಣ ಈ ಸಂಘದ ಪ್ರಪ್ರಥಮ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ. ಅ.16ರಂದು ಈ ಸಂಘದ ವಿಧ್ಯುಕ್ತ ಉದ್ಘಾಟನೆ ನಡೆಯಬೇಕಿತ್ತು. ಆದರೆ ಕಾರಣಾಂತರದಿಂದ ಅದು ಮುಂದೂಡಲ್ಪಟ್ಟಿದ್ದು, 2022ರ ಜನವರಿ 16ರಂದು ಚಾಮರಾಜಪೇಟೆ ಬಡಾವಣೆ ನಿವಾಸಿಗರ ಕ್ಷೇಮಾಭಿವೃದ್ಧಿ ಸಂಘದ ವಿಧ್ಯುಕ್ತ ಉದ್ಘಾಟನೆ ನಡೆಯಲಿದೆ ಎಂದು ಸುಬ್ಬಣ್ಣ ತಿಳಿಸಿದ್ದಾರೆ.
ಸಂಬಂಧಿತ ಸುದ್ದಿ: ಚಾಮರಾಜಪೇಟೆ ರೆಸಿಡೆಂಟ್ಸ್ ವೆಲ್ಫೇರ್ ಅಸೋಸಿಯೇಷನ್ ಉದ್ಘಾಟನೆ ಮುಂದೂಡಿಕೆ
ಸಂಬಂಧಿತ ಸುದ್ದಿ: ಬೆಂಗಳೂರು ಸೋಮಕ್ಷತ್ರಿಯ ಗಾಣಿಗ ಸಮಾಜದ ಗೌರವಾಧ್ಯಕ್ಷ-ಅಧ್ಯಕ್ಷರಾಗಿ ಮಂಜುನಾಥ-ನರಸಿಂಹ ಅವಿರೋಧ ಆಯ್ಕೆ
ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!