ಬೆಂಗಳೂರು: ಕಡುಬಡವರಿಗೆ ಅವರಿದ್ದ ಸ್ಥಳಕ್ಕೇ ಹೋಗಿ ಉಚಿತವಾಗಿಯೇ ಚಿಕಿತ್ಸೆ ನೀಡುತ್ತ, ಮೊಬೈಲ್ ಡಾಕ್ಟರ್ ಎಂದೇ ಹೆಸರಾಗಿರುವ ಡಾ. ಸುನೀಲ್ಕುಮಾರ್ ಹೆಬ್ಬಿ ಅವರ ಸಾಮಾಜಿಕ ಜೀವನ ಮತ್ತೊಂದು ಮಜಲಿಗೆ ತಲುಪಿದೆ. ವೈದ್ಯಕೀಯ ಕ್ಷೇತ್ರದಿಂದ ಅವರೀಗ ರಾಜಕೀಯ ಕ್ಷೇತ್ರದತ್ತಲೂ ಹೊರಳಿದ್ದು, ಅವರ ರಾಜಕೀಯ ಜಿಂದಗಿ ವಿಜಯಪುರ ಜಿಲ್ಲೆಯ ಸಿಂದಗಿಯಿಂದ ಶುರುವಾಗಿದೆ.
ಈಗಾಗಲೇ ಸಾಮಾಜಿಕ ಚಟುವಟಿಕೆಯಲ್ಲಿ ಇರುವ ರವಿಕೃಷ್ಣಾರೆಡ್ಡಿ ಅವರೊಂದಿಗೆ ಈ ಮೊದಲಿನಿಂದಲೂ ಸಂಪರ್ಕದಲ್ಲಿರುವ ಡಾ. ಸುನೀಲ್ಕುಮಾರ್ ಹೆಬ್ಬಿ, ರವಿಕೃಷ್ಣಾರೆಡ್ಡಿ ಅವರು ಸ್ಥಾಪಿಸಿರುವ ಕರ್ನಾಟಕ ರಾಷ್ಟ್ರ ಸಮಿತಿ (ಕೆಆರ್ಎಸ್) ಪಕ್ಷಕ್ಕೆ ಸೇರುವ ಮೂಲಕ ಅಧಿಕೃತವಾಗಿ ರಾಜಕೀಯ ಚಟುವಟಿಕೆಗೆ ಪ್ರವೇಶಿಸಿದ್ದಾರೆ.
ರವಿಕೃಷ್ಣಾರೆಡ್ಡಿ ಅವರ ಸಮ್ಮುಖದಲ್ಲಿ ಇಂದು ಕೆಆರ್ಎಸ್ ಪಕ್ಷಕ್ಕೆ ಸೇರ್ಪಡೆಗೊಂಡಿರುವ ಡಾ. ಸುನೀಲ್ಕುಮಾರ್ ಹೆಬ್ಬಿ, ಅಕ್ಟೋಬರ್ 30ರಂದು ನಡೆಯಲಿರುವ ಉಪ ಚುನಾವಣೆಯಲ್ಲಿ ಸಿಂದಗಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ. ಮಾತೃಸಿರಿ ಫೌಂಡೇಷನ್ ಸ್ಥಾಪಿಸಿ ಆ ಮೂಲಕ ಬಡವರ ಸೇವೆ ಮಾಡುತ್ತಿರುವ ಡಾ.ಹೆಬ್ಬಿ, ರಾಜಕೀಯ ಮುಖೇನ ಮತ್ತಷ್ಟು ಜನಪರ ಕಾರ್ಯಗಳನ್ನು ಮಾಡುವ ಗುರಿ ಇರಿಸಿಕೊಂಡಿದ್ದಾರೆ.
ʼಅವಕಾಶ ಸಿಕ್ಕಾಗ ಬಡವರ ಹೃದಯದಲ್ಲಿ ಸ್ಥಳ ಮಾಡಿಕೊಳ್ಳಬೇಕುʼ ಎನ್ನುವ ಡಾ.ಹೆಬ್ಬಿ, ವಿಶ್ವ ಹೃದಯ ದಿನದಂದೇ ರಾಜಕೀಯಕ್ಕೆ ಧುಮುಕಿದ್ದಾರೆ. ʼಪ್ರಾಮಾಣಿಕ ರಾಜಕೀಯ ನನ್ನ ಗುರಿʼ ಎನ್ನುವ ಹೆಬ್ಬಿ, ತಮ್ಮ ಇದುವರೆಗಿನ ಸೇವೆಗೆ ಯಾವುದೇ ರಾಜಕೀಯ ಸೋಂಕಿಲ್ಲ ಎಂಬುದನ್ನೂ ಹೇಳುತ್ತಾರೆ.
ಗಾಣಿಗ ಸಮುದಾಯದವರಾದ ಡಾ.ಸುನೀಲ್ಕುಮಾರ್ ಹೆಬ್ಬಿಯವರು ಸಿಂದಗಿ ವಿಧಾನಸಭಾ ಕ್ಷೇತ್ರದಲ್ಲಿ ಶೇ.70ರಷ್ಟು ಗಾಣಿಗ ಸಮುದಾಯದವರು ಇರುವುದು ತಮ್ಮ ಸ್ಪರ್ಧೆಗೆ ಪೂರಕವಾಗಿರಲಿದೆ ಎಂಬ ಆಶಯವನ್ನೂ ಹೊಂದಿದ್ದಾರೆ.
ಸಂಬಂಧಿತ ಸುದ್ದಿ: ಉದ್ಯೋಗ ತೊರೆದು ಜನಸೇವೆ ಮಾಡುತ್ತಿರುವ ವೈದ್ಯ ಮಹಾಶಯ ಡಾ. ಸುನೀಲ್ ಕುಮಾರ್ ಹೆಬ್ಬಿ
ಸಂಬಂಧಿತ ಸುದ್ದಿ: ಡಾ. ಸುನೀಲ್ ಕುಮಾರ್ ಹೆಬ್ಬಿ ಅವರಿಂದ ಕಡುಬಡವರಿಗೆ ಆಹಾರ ಸೇವೆ
ಸಂಬಂಧಿತ ಸುದ್ದಿ: ಮಾರ್ದನಿಸುತ್ತಿವೆ ಗಾಣಿಗರ ಕುರಿತು ಕೋಟ ಶ್ರೀನಿವಾಸ ಪೂಜಾರಿಯವರು ಹೇಳಿರುವ ಆ ಮಾತುಗಳು..