ಬೆಂಗಳೂರು: ತಮಿಳುನಾಡಿನ ಕನ್ಯಾಕುಮಾರಿಯಲ್ಲಿ ನಡೆದ ರಾಷ್ಟ್ರಮಟ್ಟದ ವುಶು (ಭಾರತ ಸರ್ಕಾರ ಮತ್ತು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಮಾನ್ಯತೆ ಪಡೆದ ಮತ್ತು ಪ್ರಮುಖ ಅದ್ಯತಾ ಪಟ್ಟಿಯಲ್ಲಿರುವ ಕ್ರೀಡೆ) ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ವುಶು ಅಸೋಸಿಯೇಷನ್ ವತಿಯಿಂದ ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಿದ ಅವಳಿ ಸಹೋದರಿಯರಾದ ಅವ್ನಿ ಎನ್.ಎಮ್. ಮತ್ತು ಅನ್ಶಿ ಎನ್. ಎಮ್. ಎರಡು ಕಂಚಿನ ಪದಕಗಳನ್ನು ಗಳಿಸಿ, ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ.
ಅವ್ನಿ ಸಬ್ ಜೂನಿಯರ್ ಬಾಲಕಿಯರ 45 ಕೆ.ಜಿ. ವಿಭಾಗದಲ್ಲಿ ಮತ್ತು ಅನ್ಶಿ ಸಬ್ ಜೂನಿಯರ್ ಬಾಲಕಿಯರ 48 ಕೆ.ಜಿ. ವಿಭಾಗದಲ್ಲಿ ಸ್ಯಾನ್ಸೋ (ಫೈಟಿಂಗ್)ನಲ್ಲಿ ತಲಾ ಒಂದು ಕಂಚಿನ ಪದಕವನ್ನು ಪಡೆದಿದ್ದಾರೆ. ಇವರು ಪಡೆದಿರುವ ಪದಕಗಳು ಸೇರಿ, ಈ ವಿಭಾಗದಲ್ಲಿ ಕರ್ನಾಟಕಕ್ಕೆ ಒಟ್ಟು ಮೂರು ಪದಕಗಳು ಬಂದಂತಾಗಿವೆ.
ಕರ್ನಾಟಕದಲ್ಲಿ ಈ ಕ್ರೀಡೆಯಲ್ಲಿ ಮೊದಲ ಬಾರಿಗೆ ಒಂದು ಜಿಲ್ಲೆಗೆ 2 ಪದಕಗಳು ಲಭಿಸಿವೆ. ಇವರು ದಕ್ಷಿಣಕನ್ನಡ ಜಿಲ್ಲೆಯ ಪ್ರಸಿದ್ಧ ಮಾರ್ಷಲ್ ಆರ್ಟ್ಸ್ ಸಂಸ್ಥೆಯಾದ ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮಾರ್ಷಲ್ ಆರ್ಟ್ಸ್ ವಿದ್ಯಾರ್ಥಿಗಳಾಗಿದ್ದು, ಸಂಸ್ಥೆಯ ಮುಖ್ಯ ಶಿಕ್ಷಕ ನಿತಿನ್ ಎನ್. ಸುವರ್ಣ ಅವರಿಂದ ತರಬೇತಿ ಪಡೆಯುತ್ತಿದ್ದಾರೆ. ಅವ್ನಿ ಮತ್ತು ಅನ್ಶಿ ನಿರಂಜನ್ ಮುಡಿಪು ಮತ್ತು ಸ್ವರ್ಣ ಇವರ ಅವಳಿ ಪುತ್ರಿಯರು.
ಸಾರ್ವಜನಿಕ ಅಭಿನಂದನಾ ಸಮಾರಂಭ
ದಕ್ಷಿಣ ಕನ್ನಡ ವುಶು ಅಸೋಸಿಯೇಷನ್ ಮತ್ತು ಇನ್ಸ್ಟಿಟ್ಯೂಟ್ ಆಫ್ ಕರಾಟೆ ಆ್ಯಂಡ್ ಮಾರ್ಷಲ್ ಆರ್ಟ್ಸ್ ಇವರ ಜಂಟಿ ಆಶ್ರಯದಲ್ಲಿ ರಾಷ್ಟ್ರಮಟ್ಟದ ವುಶು ಮತ್ತು ಕಿಕ್ ಬಾಕ್ಸಿಂಗ್ ಸ್ಪರ್ಧೆಯ ಪದಕ ವಿಜೇತ ಕ್ರೀಡಾಪಟುಗಳಿಗೆ ಸಾರ್ವಜನಿಕ ಅಭಿನಂದನಾ ಸಮಾರಂಭವನ್ನು ನೇರೆವೇರಿಸಲಾಯಿತು.
ಸುರತ್ಕಲ್ ಕರ್ನಾಟಕ ಸೇವಾ ವೃಂದದ ರಂಗಮಂದಿರದಲ್ಲಿ ಆಯೋಜಿಸಲಾಗಿದ್ದ ಈ ಸಮಾರಂಭದ ಅಧ್ಯಕ್ಷತೆಯನ್ನು ದಕ್ಷಿಣಕನ್ನಡ ವುಶು ಅಸೋಸಿಯೇಷನ್ ಅಧ್ಯಕ್ಷ ಸತ್ಯಜಿತ್ ಸುರತ್ಕಲ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಯುವಜನ ಸೇವಾ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಉದ್ಯಮಿ ಮಹಾಬಲ ಪೂಜಾರಿ ಕಡಂಬೋಡಿ, ದಕ್ಷಿಣಕನ್ನಡ ವುಶು ಅಸೋಸಿಯೇಷನ್ ಉಪಾಧ್ಯಕ್ಷ ಸದಾನಂದ ಪೂಜಾರಿ, ಮರವೂರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಗಣೇಶ್ ಅರ್ಬಿ ಉಪಸ್ಥಿತರಿದ್ದರು.
ರಾಷ್ಟ್ರಮಟ್ಟದ ವುಶು ಮತ್ತು ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕ ವಿಜೇತ ಕ್ರೀಡಾಪಟುಗಳಾದ ಅವ್ನಿ ಎನ್. ಎಮ್, ಅನ್ಶಿ ಎನ್. ಎಮ್. ಮತ್ತು ಕಿಕ್ ಬಾಕ್ಸಿಂಗ್ ಸ್ಪರ್ಧೆಯಲ್ಲಿ ಪದಕ ವಿಜೇತರಾದ ಅತೀಶ್ ಎಸ್. ಶೆಟ್ಟಿ, ಆದಿತ್ಯ ಕಿರಣ್, ರಾಜೇಶ್ ಕೆ., ಪ್ರಜ್ಣಾ ಜೆ. ಶೆಟ್ಟಿ, ಜಾನ್ವಿ ಕೆ., ರಕ್ಷಿತ್, ಆದಿತ್ಯ ಸಿ.ಎಮ್., ಹಸ್ಸಾ ಮೆನಾರ್, ವಿನೀತ್ ಕುಮಾರ್ ಅವರನ್ನು ಸನ್ಮಾನಿಸಲಾಯಿತು. ಸಂಸ್ಥೆಯ ಮುಖ್ಯ ಶಿಕ್ಷಕ ನಿತಿನ್ ಎನ್. ಸುವರ್ಣ, ಶಿಕ್ಷಕರಾದ ಸುಜಯ್, ಸಂಪತ್ ಕುಮಾರ್, ಶಿವಪ್ರಸಾದ್, ಮನು, ಸುಶಾಂತ್, ನಿಖಿತಾ, ಹೈಮಾನ್ ಮತ್ತು ಕಾರ್ತಿಕ್ ಉಪಸ್ಥಿತರಿದ್ದರು.
ಸಂಬಂಧಿತ ಸುದ್ದಿ: ಕಿಕ್ ಬಾಕ್ಸಿಂಗ್ನಲ್ಲಿ ಗೆದ್ದ ಈ ಅವಳಿ ಸೋದರಿಯರು ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆ
ಸಂಬಂಧಿತ ಸುದ್ದಿ: ಕರಾಟೆಯಲ್ಲಿ ಸುಂಟರಗಾಳಿ ಎಬ್ಬಿಸಿದ ಶಶಾಂಕ್; ಟೊರ್ನಡೊ ಕಿಕ್ನಲ್ಲಿ ನೊಬೆಲ್ ವರ್ಲ್ಡ್ ರೆಕಾರ್ಡ್
ಸಂಬಂಧಿತ ಸುದ್ದಿ: ಭಳಿರೆ ‘ಬಾಲರ್ಕ’.. ಇದು ಬಲಾಢ್ಯ ಭಾರತೀಯನ ಗರಡಿ!