ಬೆಂಗಳೂರು: ವೈದ್ಯಕೀಯ ಸೇವೆಯಲ್ಲಿ ಈಗಾಗಲೇ ಕಡುಬಡವರಿಗೆ ನೆರವಾಗಿ ʼಪಬ್ಲಿಕ್ ಡಾಕ್ಟರ್ʼ ಎಂದೇ ಹೆಸರಾಗಿರುವ ಡಾ. ಸುನೀಲ್ ಕುಮಾರ್ ಹೆಬ್ಬಿ ಇದೀಗ ಕಡುಬಡವರಿಗೆ ಆಹಾರ ಒದಗಿಸಲು ಕೂಡ ಮುಂದಾಗಿದ್ದಾರೆ. ಆ ನಿಟ್ಟಿನಲ್ಲಿ ಕಳೆದ ಭಾನುವಾರ ಅವರು ಒಂದಷ್ಟು ಮಂದಿಗೆ ಆಹಾರ ಒದಗಿಸಿ, ಹಸಿವು ನೀಗಿಸಿದ್ದಾರೆ.
ಉತ್ತರ ಕರ್ನಾಟಕದ ವಿಜಯಪುರ ಜಿಲ್ಲೆಯ ವಿಜಯಪುರ ಬಸ್ ನಿಲ್ದಾಣ ಸಮೀಪ ಮಾ. ೨೧ರ ಭಾನುವಾರ ಅವರು ನಿರಾಶ್ರಿತರು, ಅಶಕ್ತರು, ಬಡ ಕಾರ್ಮಿಕರು ಮತ್ತು ಅವರ ಸಹಾಯಕರು ಸೇರಿ ತೊಂಬತ್ತಕ್ಕೂ ಅಧಿಕ ಮಂದಿಗೆ ಉಚಿತವಾಗಿ ಊಟ ಒದಗಿಸಿದ್ದಾರೆ. ಶಿಕ್ಷಣ, ಮಾಹಿತಿ ಥರ ಆಹಾರದ ಹಕ್ಕು ಕೂಡ ಜಾರಿಯಾಗಬೇಕು ಎಂದು ಹೋರಾಟ ನಡೆಸುತ್ತಿರುವ ಡಾ. ಹೆಬ್ಬಿ, ತಮ್ಮ ʼಮಾತೃಶ್ರೀ ಫೌಂಡೇಷನ್ʼ ಮೂಲಕ ಈ ಮಾನವೀಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತ ಬಂದಿದ್ದಾರೆ. ಈ ಕಾರ್ಯದಲ್ಲಿ ಸಮಾನಮನಸ್ಕ ಗೆಳೆಯರೂ ಕೈಜೋಡಿಸಿದ್ದಾರೆ.
ಇನ್ನು ತಮ್ಮ ಕಾರನ್ನೇ ಮಿನಿ ಮೊಬೈಲ್ ಕ್ಲಿನಿಕ್ ಆಗಿ ಪರಿವರ್ತಿಸಿಕೊಂಡಿರುವ ಡಾ. ಸುನೀಲ್ ಕುಮಾರ್ ಹೆಬ್ಬಿ, ಈಗಾಗಲೇ ನೂರಾರು ಆರೋಗ್ಯ ಶಿಬಿರಗಳನ್ನು ಉಚಿತವಾಗಿ ನಡೆಸಿದ್ದಾರೆ. ಕಳೆದ ಒಂದು ದಶಕಕ್ಕೂ ಹೆಚ್ಚು ಕಾಲದಿಂದ ಈ ಸೇವೆ ನಡೆಸುತ್ತಿರುವ ಡಾ. ಹೆಬ್ಬಿ, ಈಗಾಗಲೇ 780 ಕ್ಯಾಂಪ್ ನಡೆಸಿ ಒಂದೂವರೆ ಲಕ್ಷಕ್ಕೂ ಅಧಿಕ ಹೊರರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ. ಮಾತ್ರವಲ್ಲ ಶಸ್ತ್ರಚಿಕಿತ್ಸೆ ಅಗತ್ಯವಿದ್ದ ಒಂದೂವರೆ ಸಾವಿರಕ್ಕೂ ಹೆಚ್ಚು ರೋಗಿಗಳಿಗೆ ಸೂಕ್ತ ಶಿಫಾರಸು ಮಾಡಿ ಮಾರ್ಗದರ್ಶನವನ್ನೂ ನೀಡಿದ್ದಾರೆ.
ಗಾಣಿಗ ಸಮಾಜದ ಕುರಿತ ಸುದ್ದಿ-ಸಮಾಚಾರ, ವ್ಯಕ್ತಿ-ವಿಶೇಷ, ಸಾಧನೆ-ಸಮಾರಂಭ, ಆಚಾರ-ವಿಚಾರ, ಕಥೆ-ಕವನ, ಅಡುಗೆ-ಆರೋಗ್ಯ ಇತ್ಯಾದಿ ಮಾಹಿತಿಗಳನ್ನು ಫೋಟೋ ಸಹಿತ ಈ ಕೆಳಗಿನ 'ಐಡಿ'ಗೆ ಇ-ಮೇಲ್ ಮಾಡಿ. ಮಾಹಿತಿ ಜೊತೆ ನಿಮ್ಮ ಹೆಸರು, ಮೊಬೈಲ್ ಫೋನ್ ನಂಬರ್ ನಮೂದಿಸುವುದು ಕಡ್ಡಾಯ.
G-Mail ID
[email protected]
ಸಂಬಂಧಿತ ಸುದ್ದಿ: ಉದ್ಯೋಗ ತೊರೆದು ಜನಸೇವೆ ಮಾಡುತ್ತಿರುವ ವೈದ್ಯ ಮಹಾಶಯ ಡಾ. ಸುನೀಲ್ ಕುಮಾರ್ ಹೆಬ್ಬಿ